ಸಿರಿಗನ್ನಡ ವೈಭವ



ಕನ್ನಡಸಿರಿ ವೈಭವವಿದು

ಸಭ್ಯತೆಗಳ ಬಟ್ಟಲು

ಜ್ಞಾನ ಗೀತೆ ನೀತಿ ನಾಟ್ಯ

ಶಿಲ್ಪಕಲೆಯ ತೊಟ್ಟಿಲು ||೧||

 

ನದಿಮಲೆಗಳ ಹಸಿರೆಲೆಗಳ

ತಂಗಾಳಿಯ ಜೋಗುಳ

ಕಡಲಲೆಗಳ ಕರುನಾಡಿದು

ಪ್ರಕೃತಿಗಿದೇ ದೇಗುಲ  ||೨||

 

ಜಕಣ ಚವನ ಚಾವುಂಡರು

 ಉಳಿಯ ಹಿಡಿದು ತನ್ಮಯ

ಜೀವತುಂಬಿ ಮೂಡಿಬಂದ

ವಾಸ್ತು ಶಿಲ್ಪ ವಿಸ್ಮಯ  ||೩||

 

ಜಿನಬಸದಿ ಬುದ್ಧಚೈತ್ಯ

ಸರ್ವಧರ್ಮ ಸಾರಿವೆ

ಗುರುದ್ವಾರ ಮಂದಿರಶಿಲೆ

ಇತಿಹಾಸವ ಹಾಡಿವೆ  ||೪||

 

ಕನಕ ವಾದಿ ವಿಜಯ ವ್ಯಾಸ

ಪುರಂದರರ ಕೀರ್ತನೆ

ಬೇಂದ್ರೆ ಮಾಸ್ತಿ ಕೃಷ್ಣರಾಯ

ಪುಟ್ಟಪ್ಪರ ಪ್ರಾರ್ಥನೆ  ||೫||

 

ಗಂಗದಂಬ ಚೋಳಕೂಟ

ಹೊಯ್ಸಳ ಚಾಲುಕ್ಯರು

ಶಾಸನದಲೆ ಕಾವ್ಯ ಬೆಸೆದ

ಒಡೆಯ ನಾಯ್ಕ ಬುಕ್ಕರು  ||೬||

 

ಹಿರಿಮೆ ಮರೆತು ಸಿಲುಕದಿರಿ

 ದುರಭಿಮಾನ ಸುಳಿಯಲಿ

ಕೆಚ್ಚೆದೆಯಲಿ ಬಡಿದೆಬ್ಬಿಸಿ

ನವ ಪೀಳಿಗೆ ಉಳಿಯಲಿ  ||೭||

 

ಚಿರಮೌಡ್ಯದ ನಿದ್ರೆ ಸಾಕು

ಇಂದಾದರೂ ಏಳಿರಿ

ಘನವೈಭವ ಪರಂಪರೆ

ನಾಡ ಸಿರಿಯ ಹಾಡಿರಿ  ||೮||

Comments

Popular posts from this blog

ವೈದ್ಯೋ ನಾರಾಯಣೋ ಹರಿಃ

ವೈದ್ಯರತ್ನ ಶಿರೋಮಣಿ : ಡಾ. ಬಿದಾನ್ ಚಂದ್ರ ರಾಯ್.

ನವಭಾರತಕ್ಕಾಗಿ ಆಯುರ್ವೇದ