ಸಿರಿಗನ್ನಡ ವೈಭವ
ಕನ್ನಡಸಿರಿ ವೈಭವವಿದು
ಸಭ್ಯತೆಗಳ
ಬಟ್ಟಲು
ಜ್ಞಾನ ಗೀತೆ ನೀತಿ ನಾಟ್ಯ
ಶಿಲ್ಪಕಲೆಯ
ತೊಟ್ಟಿಲು ||೧||
ನದಿಮಲೆಗಳ
ಹಸಿರೆಲೆಗಳ
ತಂಗಾಳಿಯ ಜೋಗುಳ
ಕಡಲಲೆಗಳ ಕರುನಾಡಿದು
ಪ್ರಕೃತಿಗಿದೇ ದೇಗುಲ ||೨||
ಜಕಣ ಚವನ ಚಾವುಂಡರು
ಉಳಿಯ ಹಿಡಿದು ತನ್ಮಯ
ಜೀವತುಂಬಿ
ಮೂಡಿಬಂದ
ವಾಸ್ತು ಶಿಲ್ಪ ವಿಸ್ಮಯ ||೩||
ಜಿನಬಸದಿ ಬುದ್ಧಚೈತ್ಯ
ಸರ್ವಧರ್ಮ
ಸಾರಿವೆ
ಗುರುದ್ವಾರ
ಮಂದಿರಶಿಲೆ
ಇತಿಹಾಸವ ಹಾಡಿವೆ ||೪||
ಕನಕ ವಾದಿ ವಿಜಯ ವ್ಯಾಸ
ಪುರಂದರರ ಕೀರ್ತನೆ
ಬೇಂದ್ರೆ ಮಾಸ್ತಿ ಕೃಷ್ಣರಾಯ
ಪುಟ್ಟಪ್ಪರ
ಪ್ರಾರ್ಥನೆ ||೫||
ಗಂಗದಂಬ ಚೋಳಕೂಟ
ಹೊಯ್ಸಳ ಚಾಲುಕ್ಯರು
ಶಾಸನದಲೆ ಕಾವ್ಯ ಬೆಸೆದ
ಒಡೆಯ ನಾಯ್ಕ ಬುಕ್ಕರು ||೬||
ಹಿರಿಮೆ ಮರೆತು ಸಿಲುಕದಿರಿ
ದುರಭಿಮಾನ ಸುಳಿಯಲಿ
ಕೆಚ್ಚೆದೆಯಲಿ
ಬಡಿದೆಬ್ಬಿಸಿ
ನವ ಪೀಳಿಗೆ ಉಳಿಯಲಿ ||೭||
ಚಿರಮೌಡ್ಯದ
ನಿದ್ರೆ ಸಾಕು
ಇಂದಾದರೂ ಏಳಿರಿ
ಘನವೈಭವ ಪರಂಪರೆ
ನಾಡ ಸಿರಿಯ ಹಾಡಿರಿ ||೮||
Comments
Post a Comment