Posts

Showing posts from October, 2023

ಸಿರಿಗನ್ನಡ ವೈಭವ

Image
ಕನ್ನಡಸಿರಿ ವೈಭವವಿದು ಸಭ್ಯತೆಗಳ ಬಟ್ಟಲು ಜ್ಞಾನ ಗೀತೆ ನೀತಿ ನಾಟ್ಯ ಶಿಲ್ಪಕಲೆಯ ತೊಟ್ಟಿಲು ||೧||   ನದಿಮಲೆಗಳ ಹಸಿರೆಲೆಗಳ ತಂಗಾಳಿಯ ಜೋಗುಳ ಕಡಲಲೆಗಳ ಕರುನಾಡಿದು ಪ್ರಕೃತಿಗಿದೇ ದೇಗುಲ  ||೨||   ಜಕಣ ಚವನ ಚಾವುಂಡರು  ಉಳಿಯ ಹಿಡಿದು ತನ್ಮಯ ಜೀವತುಂಬಿ ಮೂಡಿಬಂದ ವಾಸ್ತು ಶಿಲ್ಪ ವಿಸ್ಮಯ  ||೩||   ಜಿನಬಸದಿ ಬುದ್ಧಚೈತ್ಯ ಸರ್ವಧರ್ಮ ಸಾರಿವೆ ಗುರುದ್ವಾರ ಮಂದಿರಶಿಲೆ ಇತಿಹಾಸವ ಹಾಡಿವೆ  ||೪||   ಕನಕ ವಾದಿ ವಿಜಯ ವ್ಯಾಸ ಪುರಂದರರ ಕೀರ್ತನೆ ಬೇಂದ್ರೆ ಮಾಸ್ತಿ ಕೃಷ್ಣರಾಯ ಪುಟ್ಟಪ್ಪರ ಪ್ರಾರ್ಥನೆ  ||೫||   ಗಂಗದಂಬ ಚೋಳಕೂಟ ಹೊಯ್ಸಳ ಚಾಲುಕ್ಯರು ಶಾಸನದಲೆ ಕಾವ್ಯ ಬೆಸೆದ ಒಡೆಯ ನಾಯ್ಕ ಬುಕ್ಕರು  ||೬||   ಹಿರಿಮೆ ಮರೆತು ಸಿಲುಕದಿರಿ  ದುರಭಿಮಾನ ಸುಳಿಯಲಿ ಕೆಚ್ಚೆದೆಯಲಿ ಬಡಿದೆಬ್ಬಿಸಿ ನವ ಪೀಳಿಗೆ ಉಳಿಯಲಿ  ||೭||   ಚಿರಮೌಡ್ಯದ ನಿದ್ರೆ ಸಾಕು ಇಂದಾದರೂ ಏಳಿರಿ ಘನವೈಭವ ಪರಂಪರೆ ನಾಡ ಸಿರಿಯ ಹಾಡಿರಿ  ||೮||